Skip to main content
Source
Vijayavani
Author
Mallikarjun K R
Date

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯ, ತೀರ್ವನಕ್ಕೆ ಮನ್ನಣೆ ಸಿಗುತ್ತದೆ ಎಂಬ ಭಾವನೆಯೇನೋ ಇದೆ. ಜನಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುತ್ತೇವೆ ಎಂಬುದೇನೋ ನಿಜ. ಆದರೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜನರಿಂದ ಯಾವುದೇ ಅಭಿಪ್ರಾಯ ಸಂಗ್ರಹಿಸುವುದಿಲ್ಲ, ಅನಿಸಿಕೆ ಪಡೆಯುವುದಿಲ್ಲ. ‘ಈ ಅಭ್ಯರ್ಥಿ ಸೂಕ್ತವೇ, ಇಲ್ಲವೇ’ ಎಂದು ಜನರಿಂದ ವಿಮರ್ಶೆ ಪಡೆದುಕೊಳ್ಳುವುದಿಲ್ಲ. ಹಣಬಲ, ಜಾತಿಬಲ, ಗೆಲ್ಲುವ ಸಾಮರ್ಥ್ಯ ಹಾಗೂ ಇತರ ‘ಲೆಕ್ಕಾಚಾರ’ಗಳನ್ನು ಕೈಗೊಂಡೇ ರಾಜಕೀಯ ಪಕ್ಷಗಳು ಶಾಸಕ, ಸಂಸದ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುತ್ತವೆ. ಆ ಬಳಿಕ ಇವರು ಹೇರಿದ ಅಭ್ಯರ್ಥಿಗಳಲ್ಲೇ ಜನರು ತಮ್ಮ ಪ್ರತಿನಿಧಿಯನ್ನು ಮತದಾನದ ಮೂಲಕ ಆಯ್ದುಕೊಳ್ಳಬೇಕು. ವಾಸ್ತವ ಪರಿಸ್ಥಿತಿ ಹೀಗಿರುವಾಗ ರಾಜಕೀಯ ಶುದ್ಧೀಕರಣ ಕನಸಿನ ಮಾತೇ ಸರಿ. ಸಚ್ಚಾರಿತ್ರ್ಯದ, ಉತ್ತಮ ವ್ಯಕ್ತಿತ್ವದ ಅಭ್ಯರ್ಥಿಗಳು ರಾಜಕೀಯ ಮುಖ್ಯವಾಹಿನಿಗೆ ಬರುವ ದಾರಿಯನ್ನು ವ್ಯವಸ್ಥೆ ಪ್ರಶಸ್ತಗೊಳಿಸಬೇಕು. ಆದರೆ, ಹಾಗಾಗುತ್ತಿಲ್ಲ ಎಂಬುದು ವಿಷಾದನೀಯ. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಅಪರಾಧಿಕ ಹಿನ್ನೆಲೆಯ ಕಳಂಕಿತ ಅಭ್ಯರ್ಥಿಗಳ ಸ್ಪರ್ಧೆ ಮತ್ತು ಗೆಲುವು ಹೆಚ್ಚುತ್ತ ಸಾಗುತ್ತಿರುವುದು ಎಚ್ಚರಿಕೆಯ ಗಂಟೆಯೇ ಸರಿ. ಪ್ರಸ್ತುತ 151 ಶಾಸಕರು ಹಾಗೂ ಸಂಸದರು ತಮ್ಮ ಚುನಾವಣಾ ಅಫಿಡವಿಟ್​ನಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಇರುವುದಾಗಿ ಮಾಹಿತಿ ನೀಡಿದ್ದಾರೆ. ಈ ಪೈಕಿ 16 ಜನರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ ಎಂದು ಎಡಿಆರ್ (ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಈ ಪೈಕಿ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ಸಂಖ್ಯೆಯೇ ಹೆಚ್ಚಿದೆ (25 ಹಾಲಿ ಸಂಸದರು ಮತ್ತು ಶಾಸಕರು) ಎಂದು ವರದಿ ತಿಳಿಸಿದೆ. 2019ರಿಂದ 2024ರವರೆಗೆ ವಿವಿಧ ಚುನಾವಣೆಗಳ ಸಂದರ್ಭದಲ್ಲಿ ರಾಜಕಾರಣಿಗಳು ಸಲ್ಲಿಸಿರುವ 4809 ಅಫಿಡವಿಟ್​ಗಳ ಪೈಕಿ 4,693ನ್ನು ಎಡಿಆರ್ ಪರಿಶೀಲಿಸಿದೆ. 16 ಸಂಸದರು ಮತ್ತು 135 ಶಾಸಕರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ನಂತರ ಆಂಧ್ರಪ್ರದೇಶದಲ್ಲಿ 21, ಒಡಿಶಾದಲ್ಲಿ 17 ಜನಪ್ರತಿನಿಧಿಗಳ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿವೆ. ಪಶ್ಚಿಮ ಬಂಗಾಳದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ, ಮಹಾರಾಷ್ಟ್ರದ ಥಾಣೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಲ್ಲೇ, ಈ ವರದಿ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ. ಕ್ರಿಮಿನಲ್ ಹಿನ್ನೆಲೆ ಇರುವ ರಾಜಕಾರಣಿಗಳಿಗೆ ಪಕ್ಷಗಳು ಟಿಕೆಟ್ ನೀಡಬಾರದು ಎಂದು ಎಡಿಆರ್ ಬಲವಾಗಿ ಶಿಫಾರಸು ಮಾಡಿರುವುದು ಸೂಕ್ತವಾಗಿಯೇ ಇದೆ. ಇಷ್ಟು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರಿಗೆ ರಾಜಕೀಯ ಪಕ್ಷಗಳು ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು. ಅಲ್ಲದೆ, ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಈ ಪ್ರಕರಣಗಳ ತನಿಖೆ ನಡೆಸುವಂತಾಗಬೇಕು.


abc